ದಾಂಡೇಲಿ : ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸೋತು ಹತಾಶರಾಗಿ ವಿರೋಧಿ ಗುಂಪು ಸಂಘದ ಕಾರ್ಯವೈಖರಿಯ ಬಗ್ಗೆ ಆರೋಪಗಳನ್ನು ಮಾಡುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ನಗರದ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮಾರುತಿ ಕಾಂಬ್ರೇಕರ್ ಹೇಳಿದರು.
ಅವರು ನಗರದ ಕುಳಗಿ ರಸ್ತೆಯಲ್ಲಿರುವ ದಾಂಡೇಲಪ್ಪ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಸುದ್ದಿಗೋಷ್ಡಿ ಉದ್ದೇಶಿಸಿ ಮಾತನಾಡುತ್ತಿದ್ದರು. ಕಳೆದ 66 ವರ್ಷಗಳಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಯಡೆಗೆ ಸಾಗುತ್ತಿದೆ. ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಸಂಘಕ್ಕೆ ರಾಜ್ಯ ಅಪೇಕ್ಸ್ ಬ್ಯಾಂಕಿನಿಂದ 10 ಬಾರಿ ಪ್ರಶಸ್ತಿ ಹಾಗೂ ಕೆಡಿಸಿಸಿ ಬ್ಯಾಂಕಿನಿಂದ ಜಿಲ್ಲಾಮಟ್ಟದ ಉತ್ತಮ ಸಂಘವೆಂದು 23 ಬಾರಿ ಪ್ರಶಸ್ತಿಯನ್ನು ಪಡೆದ ಹಿರಿಮೆಯಿದೆ. ಆದರೆ 2024ರ ಡಿಸೆಂಬರ್ ತಿಂಗಳಿನಲ್ಲಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಮ್ಮ ಗುಂಪು ಜಯಭೇರಿ ಬಾರಿಸಿ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುತ್ತದೆ. ಆದರೆ ಈ ಚುನಾವಣೆಯಲ್ಲಿ ಸೋತಂತಹ ನಮ್ಮ ವಿರೋಧಿ ಗುಂಪಿನವರು ಸೋಲಿನಿಂದ ಹತಾಶರಾಗಿ ಸಂಘದ ಕಾರ್ಯ ವೈಖರಿಯ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದರ ಜೊತೆಯಲ್ಲಿ ಮೊನ್ನೆ ಸಂಘದ ಕಾರ್ಯಾಲಯದಲ್ಲಿ ಧರಣಿಯನ್ನು ಮಾಡಿದ್ದರು. ಆನಂತರ ತಾಲೂಕಾಡಳಿತದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಎಲ್ಲ ವಿಷಯಗಳ ಬಗ್ಗೆ ಇತ್ಯರ್ಥಪಡಿಸಲಾಗಿದೆ. ಆದರೆ ಸಂಘದ ಬಗ್ಗೆ ನಮ್ಮ ವಿರೋಧಿಗಳು ಆರೋಪಿಸಿರುವ ಎಲ್ಲ ವಿಷಯಗಳಲ್ಲಿ ಯಾವುದೇ ಹುರುಳಿಲ್ಲದಿರುವುದರಿಂದ ಸಂಘದ ಶೇರುದಾರರು ಹಾಗೂ ಸಂಘದ ವ್ಯವಹಾರದಾರರು ಅವರ ಟೀಕೆಗಳಿಗೆ ಆರೋಪಗಳಿಗೆ ಯಾವುದೇ ರೀತಿಯಲ್ಲಿ ಭಯಭೀತರಾಗದೆ, ಸಂಘದ ಪ್ರಗತಿಗೆ ಎಂದಿನAತೆ ಸಹಕರಿಸುವಂತೆ ವಿನಂತಿಸಿದರಲ್ಲದೇ, ಸಂಘವು ಅತ್ಯಂತ ಪಾರದರ್ಶಕವಾಗಿ ಸರಕಾರದ ನಿಯಮಾವಳಿಯಂತೆ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಬಗ್ಗೆ ಆರೋಪಗಳನ್ನು ಮಾಡಿದರೂ ಸಹಿತ ಅವರೇನು ಹೊರಗಿನವರಲ್ಲ, ಅವರು ಕೂಡ ನಮ್ಮ ಸಂಘದ ಸದಸ್ಯರು. ಅವರಿಗೆ ನಾವು ಬೆಳೆ ಸಾಲ ಕೊಡುವುದಿಲ್ಲ ಎಂದು ಹೇಳಿಲ್ಲ. ಆದರೆ ಸಹಕಾರ ಸಂಘಗಳ ನಿಯಮದ ಪ್ರಕಾರ ಅವರಿಗೆ ಸಾಲ ನೀಡಲು ಕ್ರಮವನ್ನು ಕೈಗೊಳ್ಳಲಾಗುವುದು ಎಂದರು. ಸಂಘದ ವಿಚಾರ ಬಂದಾಗ ಎಲ್ಲರೂ ಒಂದಾಗಿ ಸಂಘದ ಅಭಿವೃದ್ಧಿಗೆ ಒಂದೇ ದಾರದಲ್ಲಿ ಹೆಣೆದ ಹೂಗಳಂತೆ ಪರಸ್ಪರ ಒಂದಾಗಿ ಭ್ರಾತೃತ್ವದಿಂದ ಸಂಘದ ಪುರೋಅಭಿವೃದ್ಧಿಗೆ ನಮ್ಮನ್ನು ನಾವು ಪ್ರಾಂಜಲ ಗುಣ ಮನಸ್ಸಿನಿಂದ ತೊಡಗಿಸಿಕೊಳ್ಳೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶಿವಾಂವ ನಾರಗೋಳಕರ, ಪ್ರಮುಖರಾದ ವಾಮನ್ ಮಿರಾಶಿ, ರವಿ ವಾಟ್ಲೇಕರ, ಅಂತೋನಿ, ಈಶ್ವರ ಮೊಗ್ರಿ, ಸಂತಾನ ನಾಯ್ಕ, ಮಹಾವೀರ ನೇರ್ಲೇಕರ, ಗಣಪತಿ ಬೇಕಣಿ, ಶಂಕರ ಮಿರಾಶಿ ಮೊದಲಾದವರು ಉಪಸ್ಥಿತರಿದ್ದರು.